ಬಸ್​​ ನಿಲ್ಲಿಸದ್ದಕ್ಕೆ ಬಸ್​ಗೆ ಕಲ್ಲು – ಮಹಿಳೆಗೆ 5 ಸಾವಿರ ರೂಪಾಯಿ ದಂಡ

ಬಸ್​ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಬಸ್​​ಗೆ ಕಲ್ಲೆಸೆದು ಹಾನಿ ಉಂಟು ಮಾಡಿದ ಮಹಿಳೆ ಕೊನೆಗೆ 5 ಸಾವಿರ ದಂಡ ಕಟ್ಟಿ ಅದೇ ಬಸ್​ನಲ್ಲಿ ಪ್ರಯಾಣಿಸಿದ್ದಾರೆ.

ಕೊಪ್ಪಳದಿಂದ ಹೊಸಪೇಟೆಗೆ ಹೊರಟ್ಟಿದ್ದ ನಾನ್​​ಸ್ಟಾಪ್​ ಬಸ್​ಗೆ ಲಕ್ಷ್ಮೀ ಎಂಬಾಕೆ ಕಲ್ಲು ತೂರಾಟ ನಡೆಸಿ ಹಾನಿ ಮಾಡಿದ್ದರು.

ಬಳಿಕ ಆ ಮಹಿಳಾ ಪ್ರಯಾಣಿಕರನ್ನು ಬಸ್​ನ ಡ್ರೈವರ್​ ಕಂ ಕಂಡಕ್ಟರ್​ ಆಗಿದ್ದ ಮುಕ್ಕಣ್ಣ ಅವರು ನೇರವಾಗಿ ಕೊಪ್ಪಳದ ಮುನಿರಾಬಾದ್​ ಠಾಣೆಗೆ ಕರೆದುಕೊಂಡು ಬಂದರು.

ಬಳಿಕ ಬಸ್​ಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ 5 ಸಾವಿರ ರೂಪಾಯಿ ದಂಡ ಕಟ್ಟಿ, ಕ್ಷಮೆ ಕೇಳಿ ಲಕ್ಷ್ಮೀ ಅದೇ ಬಸ್​ನಲ್ಲಿ ತೆರಳಿದರು.  ಬಾಗಲಕೋಟೆ ಜಿಲ್ಲೆಯ ಇಳ್​ಕಲ್​ ನಿವಾಸಿಯಾಗಿರುವ ಲಕ್ಷ್ಮೀ ಕೊಪ್ಪಳದ ಹೊಸ ಲಿಂಗಾಪುರದಲ್ಲಿ ಬಸ್​ಗೆ ಕಲ್ಲೆಸೆದಿದ್ದರು.

ಇವರು ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ  ಪಡೆದು ಊರಿಗೆ ವಾಪಸ್​ ಆಗಲು ಬಸ್​ಗಾಗಿ ಕಾಯುತ್ತಿದ್ದರು. ಆದರೆ ಬಸ್​​ ನಿಲ್ಲಿಸಿಲ್ಲ ಎಂಬ ಕಾರಣಕ್ಕಾಗಿ ಬಸ್​ಗೆ ಕಲ್ಲು ತೂರಾಟ ನಡೆಸಿದ್ದರು.