ಟಿಆರ್ಎಸ್ ಪಕ್ಷ (TRS Party )ಬಿಆರ್ಎಸ್ (BRS Party ) ಆಗಲಿದೆ. ಅಂದರೆ ತೆಲಂಗಾಣ ರಾಷ್ಟ್ರ ಸಮಿತಿ ಇನ್ಮುಂದೆ ಭಾರತೀಯ ರಾಷ್ಟ್ರ ಸಮಿತಿ (Bharatiya Rashtra samiti )ಎಂದು ಬದಲಾಗಲಿದೆ. ದಸರಾ ಹಬ್ಬದ ಪರ್ವ ದಿನ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (Telangana Chief Minister K chandrashekhar)ಅವರು, ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಲಿದ್ದಾರೆ.
ಹೈದರಾಬಾದ್ನ ಪ್ರಗತಿ ಭವನದದಲ್ಲಿ ನಡೆದ ಟಿಆರ್ಎಸ್ ಸಭೆಯಲ್ಲಿ ಕೆಸಿಆರ್ ಹಲವು ಪ್ರಮುಖ ನಿರ್ಣಯ ತೆಗೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಂತಿರುವ ಕೆ ಚಂದ್ರಶೇಖರ್ ರಾವ್ ಅಕ್ಟೋಬರ್ ಐದರಂದು ಮಧ್ಯಾಹ್ನ 1.19ಕ್ಕೆ ಸರಿಯಾಗಿ ರಾಷ್ಟ್ರೀಯ ಪಕ್ಷದ ಸ್ಥಾಪನೆ ಮಾಡಲಿದ್ದಾರೆ.
ಮೊದಲಿಗೆ ಪಕ್ಷದ ಹೆಸರನ್ನು ಬದಲಿಸಲು ತೀರ್ಮಾನಿಸಲಾಗಿದೆ. ತೆಲಂಗಾಣ ರಾಷ್ಟ್ರಸಮಿತಿ ಬದಲು ಭಾರತೀಯ ರಾಷ್ಟ್ರ ಸಮಿತಿ ಎಂದು ಪಕ್ಷದ ಹೆಸರನ್ನು ಮಾರ್ಪಾಡು ಮಾಡಲಾಗುತ್ತದೆ. ಪಕ್ಷದ ಕಾರ್ಯಸೂಚಿ ಏನು ಎನ್ನುವುದನ್ನು ಕೆಸಿಆರ್ ಪ್ರಕಟಿಸಲಿದ್ದಾರೆ.
ಡಿಸೆಂಬರ್ 9ರಂದು ದೆಹಲಿಯಲ್ಲಿ ಭೃಹತ್ ಸಭೆ ನಡೆಸಲು ಕೆ ಚಂದ್ರಶೇಖರ್ ರಾವ್ ತೀರ್ಮಾನಿಸಿದ್ದಾರೆ. ಈ ಸಮಾವೇಶದಲ್ಲಿ ದೇಶದ ಪ್ರಮುಖ ಪಕ್ಷಗಳ ನಾಯಕರನ್ನು ಆಹ್ವಾನಿಸಿ, ಪಕ್ಷದ ಅಜೆಂಡಾವನ್ನು ಪ್ರಕಟಿಸುವ ಸಂಭವ ಇದೆ.
ಪ್ರಾದೇಶಿಕ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಮಾಡುವುದರಿಂದ ತಾಂತ್ರಿಕವಾಗಿ ಯಾವುದೇ ಸಮಸ್ಯೆ ಆಗಲಾರದು ಎಂದು ಟಿಆರ್ಎಸ್ ನೇತಾರರು ಭಾವಿಸಿದ್ದಾರೆ. ಈ ಕುರಿತಾಗಿ ಕಾನೂನು ತಜ್ಞರ ಜೊತೆ ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ.