ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಕ್ಷ್ಯ ಸಲ್ಲಿಕೆ ಮಾಡುವಂತೆ ನಟಿ ಶೃತಿ ಹರಿಹರನ್ ಅವರಿಗೆ ಬೆಂಗಳೂರಿನ ನ್ಯಾಯಾಲಯ ಸೂಚಿಸಿದೆ.
ಸಾಕ್ಷ್ಯ ಸಲ್ಲಿಸುವಂತೆ ನಟಿಗೆ ಸೂಚಿಸಿ ಬೆಂಗಳೂರಿನ 8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
2018ರ ಅಕ್ಟೋಬರ್ ಮೀ ಟೂ ಚಳುವಳಿ (ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ) ತೀವ್ರಗೊಂಡಿದ್ದ ಹೊತ್ತಲ್ಲಿ ಶೃತಿ ಅವರೂ ಕೂಡಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ 4 ಪುಟಗಳ ಪತ್ರವನ್ನು ಬರೆದು ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ವಿಸ್ಮಯ ಸಿನಿಮಾದ ಚಿತ್ರೀಕರಣಕ್ಕೂ ಮೊದಲು ವೇಳೆ ತಮ್ಮನ್ನು ಬರಸೆಳೆದು ಅಪ್ಪಿಕೊಂಡರು, ಅಸಭ್ಯವಾಗಿ ವರ್ತಿಸಿ ತಮ್ಮ ಹಿಂಬದಿಗೆ ಕೈ ಹಾಕಿದರು. ಶೂಟಿಂಗ್ ಸೆಟ್ನಲ್ಲಿ 50 ಜನರ ಎದುರಲ್ಲಿ ಕೃತ್ಯ ನಡೆದಿತ್ತು ಎಂದು ನಟಿ ಶೃತಿ ಅವರು ಆರೋಪಿಸಿದ್ದರು.
ಇದಾದ ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶೃತಿ ಆರೋಪದ ಬಗ್ಗೆ ತನಿಖೆ ನಡೆಸಿದ್ದ ಕಬ್ಬನ್ ಪಾರ್ಕ್ ಪೊಲೀಸರು 2021ರ ಡಿಸೆಂಬರ್ನಲ್ಲಿ ಕೋರ್ಟ್ಗೆ ಬಿ ರಿಪೋರ್ಟ್ (ಆರೋಪ ಸಾಬೀತಾಗಿಲ್ಲ ಎಂದು ವರದಿ) ಸಲ್ಲಿಸಿದ್ದರು.
ಜನವರಿ 13, 2022ರಲ್ಲಿ ಕೋರ್ಟ್ ಪೊಲೀಸರ ಸಲ್ಲಿಸಿದ್ದ ವರದಿಯನ್ನು ಸ್ವೀಕಾರ ಮಾಡಿತ್ತು. ಆದರೆ ಬಿ ರಿಪೋರ್ಟ್ ಪ್ರಶ್ನಿಸಿ ಶೃತಿ ಹರಿಹರನ್ ಅವರು 8ನೇ ಎಸಿಎಂಎಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.