BREAKING: ಕಾಂಗ್ರೆಸ್​ ವಿರೋಧಿ ಒಕ್ಕೂಟ ಸೇರಿಕೊಳ್ಳಲಿರುವ JDS ನಾಯಕ ಕುಮಾರಸ್ವಾಮಿ

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್​​ಗೆ ಪರ್ಯಾಯವಾಗಿ ಒಕ್ಕೂಟವನ್ನು ರಚಿಸಿಕೊಳ್ಳುವ ರಣತಂತ್ರದ ಭಾಗವಾಗಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್​ ಡಿ ಕುಮಾರಸ್ವಾಮಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್​ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಆಗಲಿದ್ದಾರೆ.

ಮಾರ್ಚ್​ 24ರಂದು ಕೋಲ್ಕತ್ತಾದಲ್ಲಿ ಈ ಇಬ್ಬರೂ ನಾಯಕರ ಭೇಟಿ ನಡೆಯಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​​ಗೆ ಕಡಿವಾಣ ಹಾಕುವ ಭಾಗವಾಗಿ ಮಮತಾ ಬ್ಯಾನರ್ಜಿ ಜೊತೆಗಿನ ಕುಮಾರಸ್ವಾಮಿ ಭೇಟಿ ಮಹತ್ವ ಪಡೆದಿದೆ. 

ಇದೇ ವಾರದಲ್ಲಿ ಮಮತಾ ಅವರು ಒಡಿಶಾ ಮುಖ್ಯಮಂತ್ರಿ ಮತ್ತು ಬಿಜು ಜನತಾದಳದ ನಾಯಕ ನವೀನ್​ ಪಟ್ನಾಯಕ್​ ಅವರನ್ನು ಭೇಟಿಯಾಗಲಿದ್ದಾರೆ. ಒಡಿಶಾದಲ್ಲಿ ಕಾಂಗ್ರೆಸ್​ನ್ನು ಕಟ್ಟಿಹಾಕುವುದು ಈ ಭೇಟಿಯ ಉದ್ದೇಶ.

ಜೊತೆಗೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್​ ಆದ್ಮಿ ಪಕ್ಷದ ನಾಯಕ ಅರವಿಂದ್​ ಕೇಜ್ರಿವಾಲ್​ ಅವರನ್ನೂ ಮಮತಾ ಬ್ಯಾನರ್ಜಿ ಭೇಟಿಯಾಗಲಿದ್ದಾರೆ.

ಕಳೆದ ವಾರವಷ್ಟೇ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಸಿಂಗ್​ ಯಾದವ್​ ಅವರನ್ನು ಮಮತಾ ಅವರು ಭೇಟಿ ಆಗಿದ್ದರು. ಉತ್ತರಪ್ರದೇಶದಲ್ಲಿ ಚುನಾವಣಾ ಪೂರ್ವ ಮೈತ್ರಿಗೆ ಎರಡೂ ಪಕ್ಷಗಳು ನಿರ್ಧರಿಸಿದ್ದವು. 

ಉಪ ಚುನಾವಣೆ ಸೋಲು ಮತ್ತು ಮಮತಾಗೆ ಕಾಂಗ್ರೆಸ್​ ಆತಂಕ:

ಮಾರ್ಚ್​ 5ರಂದು ಬಂದ ಉಪ ಚುನಾವಣಾ ಫಲಿತಾಂಶದಲ್ಲಿ ಪಶ್ಚಿಮ ಬಂಗಾಳದ ಸಾಗರ್​ದಿಘಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಐತಿಹಾಸಿಕ ಗೆಲುವು ಕಂಡಿತ್ತು. ಎಡಪಕ್ಷಗಳು ಮತ್ತು ಕಾಂಗ್ರೆಸ್​ ಮೈತ್ರಿಕೂಟದ ಕಾರಣದಿಂದ 51 ವರ್ಷಗಳ ಬಳಿಕ ಮತ್ತೆ ಈ ಕ್ಷೇತ್ರ ಕಾಂಗ್ರೆಸ್​ ಪಾಲಾಯಿತು.

ಪಶ್ಚಿಮ ಬಂಗಾಳದಲ್ಲಿನ ಸದ್ಯದ ರಾಜಕೀಯ ಸ್ಥಿತಿಯಲ್ಲಿ ಕಾಂಗ್ರೆಸ್​-ಎಡಪಕ್ಷ ಮೈತ್ರಿಕೂಟ ಬಿಜೆಪಿಗೆ ಪರ್ಯಾಯವಾಗಿ ಪ್ರಬಲಗೊಳ್ಳುತ್ತಿದೆ ಎನ್ನುವುದು ಮಮತಾ ಬ್ಯಾನರ್ಜಿ ಅವರಿಗೆ ಕಾಡುತ್ತಿರುವ ಹೊಸ ಆತಂಕ.

ಹೀಗಾಗಿಯೇ ಉಪ ಚುನಾವಣೆ ಬೆನ್ನಲ್ಲೇ ಕರ್ನಾಟಕದಲ್ಲಿ ಜೆಡಿಎಸ್​, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಒಡಿಶಾದಲ್ಲಿ ಬಿಜೆಡಿ, ದೆಹಲಿಯಲ್ಲಿ ಆಪ್​, ತೆಲಂಗಾಣದಲ್ಲಿ ಬಿಆರ್​ಎಸ್​ ಹೀಗೆ ಕಾಂಗ್ರೆಸ್​ ಪ್ರತಿರೋಧಿ ಪಕ್ಷಗಳ ಜೊತೆಗೆ ಸೇರಿಕೊಂಡು ಪರ್ಯಾಯ ಒಕ್ಕೂಟ ರಚಿಸಿಕೊಳ್ಳುವ ರಣತಂತ್ರ ಚುರುಕುಗೊಳಿಸಿದ್ದಾರೆ.