ಲಕ್ಷದ್ವೀಪದಲ್ಲಿ ಡೈರಿ ಫಾರ್ಮ್ ಕಾರ್ಯಚರಣೆ ಮಾಡಲು ಶಾಲಾ ಮಕ್ಕಳಿಗೆ ಮಧ್ಯಾಹ್ನ ನೀಡುವ ಬಿಸಿಯೂಟ ಯೋಜನೆಯಲ್ಲಿ ಮಾಂಸಾಹಾರವನ್ನು ಸೇರಿಸಿ ಎಂದು ಕೇರಳ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರೆಸುವಂತೆ ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿದೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರವನ್ನು ಹೊರಗಿಟ್ಟು, ಡೈರಿ ಫಾರ್ಮಿಂಗನ್ನು ಬಂದ್ ಮಾಡಿದ್ದ ನಿರ್ಧಾರವನ್ನು ಪಶ್ನಿಸಿ ಕೇರಳ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಈ ವೇಳೆ ಕೇರಳ ಹೈಕೋರ್ಟ್ ಬಿಸಿಯೂಟದಲ್ಲಿ ಮಾಂಸಾಹಾರ ಮುಂದುವರೆಸುವಂತೆ ಮಧ್ಯಂತರ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರಿಂಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹಾಗೂ ಎಎಸ್ ಬೊಪ್ಪಣ್ಣ ಅವರಿದ್ದ ಪೀಠ ಕೇರಳ ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ಅಸ್ತು ಎಂದಿದ್ದು, ಪಿಐಎಲ್ ಅನ್ನು ರದ್ದು ಮಾಡಿದೆ.
ಜೂನ್ 22, 2021 ರಲ್ಲಿ ಮಧ್ಯಂತರ ತೀರ್ಪು ನೀಡಿದ್ದ ಕೇರಳ ಹೈಕೋರ್ಟ್ ಸರ್ಕಾರದ ಆದೇಶಕ್ಕೆ ಸ್ಟೇ ನೀಡಿತ್ತು. ಅಲ್ಲದೇ, ಸರ್ಕಾರ ಡೈರಿ ಫಾರ್ಮ್ನ್ನು ಬಂದ್ ಮಾಡಬಾರದು ಹಾಗೂ ಶಾಲಾ ಮಕ್ಕಳಿಗೆ ಮಧ್ಯಾಹ್ನ ನೀಡುವ ಊಟ, ಚಿಕನ್, ಮಟನ್, ಮೀನು, ಮೊಟ್ಟೆ ಮತ್ತಿತರೆ ಆಹಾರಗಳನ್ನು ಈ ಹಿಂದೆ ನೀಡುತ್ತಿದ್ದಂತೆ ನೀಡಬೇಕು ಎಂದು ಆದೇಶ ಹೊರಡಿಸಿತ್ತು.
ಸೆಪ್ಟಂಬರ್ 17, 2021 ರಂದು ತಮ್ಮ ನಿರ್ಧಾರವನ್ನು ಅಂಗೀಕರಿಸುವಂತೆ ಸರ್ಕಾರ ನ್ಯಾಯಾಲಯಕ್ಕೆ ಬರಹದ ಅರ್ಜಿಯನ್ನು ಸಲ್ಲಿಸಿತ್ತು. ಆದರೆ, ಕೋರ್ಟ್ ಈ ಮನವಿಯನ್ನು ಪುರಷ್ಕರಿಸಿರಲಿಲ್ಲ. ಇದೀಗ, ಅಜ್ಮಲ್ ಅಹ್ಮದ್ ಅವರು ಸಲ್ಲಿಸಿದ್ದ ವಿಶೇಷ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಕೇರಳ ಹೈಕೋರ್ಟ್ನ ಮಧ್ಯಂತರ ಆದೇಶವನ್ನು ಮುಂದುವರೆಸುವಂತೆ ಆದೇಶ ನೀಡಿದೆ. ಅಲ್ಲದೆ, ಈ ಆದೇಶ ಪತ್ರವನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೂ ರವಾನಿಸಿದೆ.
ಮಧ್ಯಂತರ ತೀರ್ಪು ನೀಡಿದ್ದ ಹೈಕೋರ್ಟ್, ಮಕ್ಕಳಿಗೆ ನೀಡುತ್ತಿದ್ದ ಊಟದ ಮೆನುವನ್ನು ಸರ್ಕಾರ ಯಾಕೆ ಬದಲಾವಣೆ ಮಾಡಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಮಾಂಸಾಹಾರವನ್ನು ರದ್ದು ಮಾಡಿರುವುದಕ್ಕೆ ಯಾವುದೇ ಕಾರಣಗಳು ಕಾಣುತ್ತಿಲ್ಲ. ಆದ್ದರಿಂದ, ಲಕ್ಷದ್ವೀಪದಲ್ಲಿ ಇದುವರೆಗೂ ಮಕ್ಕಳಿಗೆ ನೀಡುತ್ತಿದ್ದ ಮಾಂಸಾಹಾರವನ್ನು ಮುಂದುವರೆಸುವಂತೆ ಮಧ್ಯಂತರ ಆದೇಶ ನೀಡುತ್ತಿದ್ದೇವೆ ಎಂದು ಕೇರಳ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.