ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಮತ್ತು ಈಗ ಮುಜುರಾಯಿ ಇಲಾಖೆ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ದಾಸರಿ ಅವರು ಮಾಜಿ ಸಚಿವ ಮತ್ತು ಕೆ ಆರ್ ನಗರ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಅವರ ಜೊತೆಗೆ ಸಂಧಾನಕ್ಕೆ ಯತ್ನಿಸಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿ ಆಗಿರುವ ಮಣಿವಣ್ಣನ್ ಪಿ ಅವರ ಜೊತೆಗೆ ರೋಹಿಣಿ ಸಿಂಧೂರಿ ಅವರು ಸಾ ರಾ ಮಹೇಶ್ ಅವರನ್ನು ಭೇಟಿಯಾಗಿದ್ದಾರೆ.
ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದ ವೇಳೆ ರೋಹಿಣಿ ಸಿಂಧೂರಿ ಅವರು ಸಾರಾ ಮಹೇಶ್ ಅವರನ್ನು ಭೇಟಿ ಆಗಿದ್ದರು.
ADVERTISEMENT
ಈ ಭೇಟಿಯ ಬಳಿಕ ಸಾ ರಾ ಮಹೇಶ್ ಅವರ ವಾಟ್ಸಾಪ್ಗೆ ರೋಹಿಣಿ ಸಿಂಧೂರಿ ಅವರು ಸಂದೇಶವನ್ನೂ ಕಳುಹಿಸಿದ್ದರು.
ನಿಮ್ಮ ಜಾಗದ ವಿಚಾರದ ಸರ್ವೆಗೆ ನಾನು ದಿಶಾ ಆ್ಯಪ್ ನೋಡಿ ಆದೇಶಿಸಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ. ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಕೇವಲ ಕೆಲಸದ ವಿಚಾರವಷ್ಟೇ. ಇದರಲ್ಲಿ ವೈಯಕ್ತಿಕ ವಿಚಾರ ಏನೂ ಇಲ್ಲ
ಎಂದು ರೋಹಿಣಿ ಸಿಂಧೂರಿ ಅವರು ಸಾ ರಾ ಮಹೇಶ್ ಅವರಿಗೆ ವಾಟ್ಸಾಪ್ ಮಾಡಿದ್ದರು.
ಮೈಸೂರು ಜಿಲ್ಲಾಧಿಕಾರಿ ಆಗಿದ್ದ ವೇಳೆ ರೋಹಿಣಿ ಸಿಂಧೂರಿ ದಾಸರಿ ಮತ್ತು ಸಾ ರಾ ಮಹೇಶ್ ನಡುವೆ ಸಂಘರ್ಷ ಏರ್ಪಟ್ಟಿತ್ತು.
ಮೈಸೂರಿನ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಅನುಮತಿ ಇಲ್ಲದೇ ಈಜುಕೊಳ ನವೀಕರಣ, ಕೋವಿಡ್ ಅವಧಿಯಲ್ಲಿ ಅಕ್ರಮ ಎಸಗಲಾಗಿದೆ ಮತ್ತು ಚೀಲಗಳ ಖರೀದಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಅವರು ಆರೋಪಿಸಿದ್ದರು.
ಸಾರಾ ಮಹೇಶ್ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮುಜರಾಯಿ ಇಲಾಖೆಗೆ ಎತ್ತಂಗಡಿ ಮಾಡಲಾಗಿತ್ತು.
ಜೊತೆಗೆ ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ನವೀಕರಣಗೊಳಿಸಿ ಈಜುಕೊಳ ನವೀಕರಣ ಸಂಬಂಧ ತನಿಖೆಗೂ ಆದೇಶ ನೀಡಲಾಗಿತ್ತು.
ಇತ್ತ ಸಾ ರಾ ಮಹೇಶ್ ಅವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಲ್ಯಾಣ ಮಂಟಪ ಕಟ್ಟಿದ್ದಾರೆ ಎಂದು ಹೇಳಿ ಮೈಸೂರು ಡಿಸಿ ಆಗಿದ್ದ ವೇಳೆ ರೋಹಿಣಿ ಅವರು ತನಿಖೆಗೆ ಆದೇಶಿಸಿದ್ದರು.
ಆದರೆ ಆ ಬಳಿಕ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರು ನಡೆಸಿದ ತನಿಖೆಯಲ್ಲಿ ಸಾರಾ ಮಹೇಶ್ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿಲ್ಲ ಎಂದು ವರದಿ ನೀಡಿದ್ದರು.
ಈ ವರದಿ ಬಳಿಕ ರೋಹಿಣಿ ಸಿಂಧೂರಿ ದಾಸರಿ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನುಮತಿ ಕೇಳಿ ಪತ್ರ ಬರೆದಿದ್ದರು.
ವಿಧಾನಸಭಾ ಕಲಾಪದಲ್ಲೇ ರೋಹಿಣಿ ಸಿಂಧೂರಿ ವಿರುದ್ಧದ ಅಕ್ರಮಗಳ ಬಗ್ಗೆ ಸಾ ರಾ ಮಹೇಶ್ ಮಾತಾಡಿದ್ದರು.
ADVERTISEMENT