BJP ಶಾಸಕ ಹರೀಶ್​ ಪೂಂಜಾ ವಿರುದ್ಧದ ತನಿಖೆಗೆ ಹೈಕೋರ್ಟ್​ ತಡೆ

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್​ ಪೂಂಜಾ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.  ಎಫ್​ಐಆರ್​ ರದ್ದುಕೋರಿ ಪೂಂಜಾ ಅವರು ಅರ್ಜಿ ಸಲ್ಲಿಸಿದ್ದರು.
ಪೂಂಜಾ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ಶಾಸಕರು ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ಎಫ್​ಐಆರ್​ ದಾಖಲಾಗಿದೆ. ಶಾಸಕರ ಹೇಳಿಕೆಯಿಂದ ಹಿಂಸಾಚಾರ, ಕೋಮುಭಂಗ ಸಂಭವಿಸಿಲ್ಲ. ಆಡಳಿತ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ ಕಾರಣಕ್ಕಾಗಿ ರಾಜಕೀಯ ದುರುದ್ದೇಶದಿಂದ ಪೊಲೀಸರು ಒತ್ತಡದಿಂದ ಎಫ್​ಐಆರ್​ ದಾಖಲಿಸಿದ್ದಾರೆ ಎಂದು ವಾದಿಸಿದ್ದರು.
ಬೆಳ್ತಂಗಡಿ ಪೊಲೀಸ್​ ಠಾಣೆಯಲ್ಲಿ ಐಪಿಸಿ ಕಲಂ 153, 153ಎ ಮತ್ತು 505ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಿದ್ದರಾಮಯ್ಯ 24 ಹಿಂದೂಗಳ ಹತ್ಯೆ ಮಾಡಿದ್ದರು ಎಂದು ಪೂಂಜಾ ಆಧಾರರಹಿತ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. 
ಬೆಳ್ತಂಗಡಿ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಕೆ ನಮಿತಾ ಪೂಜಾರಿ ಅವರು ಕೊಟ್ಟ ದೂರಿನಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದರು.
ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ಸಿದ್ದರಾಮಯ್ಯ ಪರ ನೀವು ವೋಟ್​ ಕೇಳಿದ್ದೀರಿ. ಬಜರಂಗದಳ ನಿಷೇಧ ಮಾಡ್ತೇವೆ ಎಂದು ಹೇಳಿದ ಕಾಂಗ್ರೆಸ್​ ಪರ ಮತ ಕೇಳಿದ್ದೀರಿ. ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳ್ತಿದ್ದಾರೆ 
ಎಂದು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಚುನಾವಣಾ ಗೆಲುವಿನ ಬಳಿಕ ಶಾಸಕ ಹರೀಶ್​ ಪೂಂಜಾ ಪ್ರಚೋದನಕಾರಿ ಭಾಷಣ ಮಾಡಿದ್ದರು.
ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಅಶ್ವತ್ಥ್​ ನಾರಾಯಣ್​ ವಿರುದ್ಧದ ತನಿಖೆಗೂ ಹೈಕೋರ್ಟ್​ ತಡೆ ನೀಡಿದೆ.