ಇತ್ತೀಚಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅಕಾಲಿಕವಾಗಿ ನಿಧಾನರಾದ ಹಿನ್ನೆಲೆಯಲ್ಲಿ, ಅವರ ಪುತ್ರ ದರ್ಶನ್ ಅವರಿಗೆ ನಂಜನಗೂಡು ಕ್ಷೇತ್ರವನ್ನು ಬಿಟ್ಟುಕೊಟ್ಟ ಬಳಿಕ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಸುದೀರ್ಘ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಬಿ ರಾಚಯ್ಯನವರ ಶಿಷ್ಯನಾಗಿ 40 ವರ್ಷಗಳ ಸಾರ್ವಜನಿಕ ಬದುಕನ್ನು ಪೂರೈಸಿದ ಈ ಸಂದರ್ಭದಲ್ಲಿ ನಮ್ಮ ಗುರುಗಳು ಮತ್ತು ಈ ರಾಜ್ಯದ ದಲಿತ ಸಂಘಟನೆಗಳು ಹೇಳಿಕೊಟ್ಟ ಪಾಠವನ್ನು ಅಕ್ಷರಶಃ ಪಾಲಿಸಿದ್ದೇನೆ.
ನನ್ನ ದೈನಂದಿನ ಓದು ಬರಹದ ಜೊತೆಗೆ ನನ್ನದೇ ಆದ ಕೆಲವು ಬದುಕಿನ ಅನುಭವಗಳ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ನ್ಯಾಯದ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಇದರ ಪರಿಣಾಮವೇ ಕರ್ನಾಟಕದಲ್ಲಿ 40 ಸಾವಿರ ಕಿಲೋಮೀಟರ್ ರಸ್ತೆಗಳ ನಿರ್ಮಾಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ಮಹತ್ವದ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ನನಗೆ ಸಾಧ್ಯವಾಗಿದೆ.
ನನಗೆ ನೆನಪಿರುವಂತೆ ನಾನು ಯಾರನ್ನೂ ದ್ವೇಷ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ಒಬ್ಬರನ್ನು ವೈಯಕ್ತಿಕವಾಗಿ ನಿಂದಿಸುವುದಾಗಲೀ ಅಥವಾ ತೇಜೋವಧೆ ಮಾಡುವ ಕೆಲಸವನ್ನಾಗಲೀ ನಾನು ಮಾಡಿಲ್ಲ. ಇದು ನನ್ನನ್ನು ಸರಿಯಾಗಿ ಬಲ್ಲ ಎಲ್ಲರಿಗೂ ಗೊತ್ತು.
ಆದರೆ ಮೊನ್ನೆ ನನ್ನ ಸಹೋದ್ಯೋಗಿ ಮಿತ್ರ ಧೃವ ನಾರಾಯಣ್ ಅವರು ಹಠಾತ್ತನೆ ಸಾವನ್ನಪ್ಪಿದ ಸುದ್ದಿ ಕೇಳಿದಾಗ ನನಗೆ ತೀವ್ರ ಅಘಾತವಾಯಿತು. ಆ ಅಘಾತವನ್ನು ಸುಧಾರಿಸಿಕೊಳ್ಳಲು ನನಗೆ ಈಗಲೂ ಸಾಧ್ಯವಾಗುತ್ತಿಲ್ಲ.
ಆದರೆ ಅದಾದ ಮಾರನೇ ದಿನ ಯಾರೋ ಕೆಲವರು ಈ ಸಾವಿಗೆ ಮಹದೇವಪ್ಪನವರೇ ಕಾರಣ ಎಂದು ಸುದ್ದಿ ಹರಡಿಸಲು ಶುರು ಮಾಡಿದಾಗ ನನಗೆ ಅತೀವವಾದ ಬೇಸರವಾಯಿತು. ಯಾವುದೋ ಕೆಲಸದ ಮೇಲೆ ಹೊರಗೆ ಹೊರಟಿದ್ದವನು ಕೂಡಲೇ ಅದನ್ನು ರದ್ದು ಮಾಡಿ ನನ್ನ ಕೋಣೆಯೊಳಗೆ ಕೂತು, ನಾನು ಸಾರ್ವಜನಿಕವಾಗಿ ಬೆಳೆದು ಬಂದ ಹಾದಿಯ ಬಗ್ಗೆ ತೀವ್ರವಾಗಿ ಯೋಚಿಸಿದೆ.
ನಮ್ಮ ಗುರುಗಳಾದ ಬಿ ರಾಚಯ್ಯನವರ ಮಾತುಗಳು, ಸಾಮಾಜಿಕ ಚಳುವಳಿಗಳು, ಬಾಬಾ ಸಾಹೇಬರ ವಿಚಾರ ಧಾರೆಗಳು, ರಾಜ್ಯದ ಜನರ ಅನುಕೂಲಕ್ಕಾಗಿ ಸಿದ್ದರಾಮಯ್ಯ ಅವರೊಂದಿಗೆ ಮಾಡಿದ ಮಹತ್ವದ ಚರ್ಚೆಗಳು ನನ್ನ ಮನಸ್ಸಿನಲ್ಲಿ ಮೂಡಿದವು.
ಇದೇ ವೇಳೆ ನನ್ನ ತಾಯಿ ಕೂಡಾ ಬಹಳ ನೆನಪಾದರು.
ಅವರು ಮಾಡುತ್ತಿದ್ದ ಆರೋಪಗಳನ್ನು ಕೇಳಿದಾಗ ನನಗೆ ಸಾವಿನಲ್ಲೂ ಹೀಗೆ ರಾಜಕೀಯ ಮಾಡುತ್ತಿದ್ದಾರಲ್ಲಾ, ಒಂದು ವೇಳೆ ನನಗೇ ಏನಾದರೂ ಆಗಿದ್ದರೆ ಇವರು ನಮ್ಮಂತೆ ನೋವು ಪಡುತ್ತಿದ್ದರಾ ಇಲ್ಲವೇ ´ಹೋದರೆ ಹೋಗಲಿ` ಎಂದು ಸುಮ್ಮನಾಗುತ್ತಿದ್ದರಾ ಎಂದು ನನಗೆ ಯೋಚನೆ ಶುರುವಾಯಿತು. ಮತ್ತೆ ಇನ್ನೊಂದು ರೀತಿಯಲ್ಲಿ ಬೇಸರವೂ ಆಯಿತು.
ವ್ಯಕ್ತಿಯೊಬ್ಬನ ಪ್ರಾಣಕ್ಕಿಂತಲೂ ರಾಜಕೀಯ ಮತ್ತು ಅಧಿಕಾರವು ಹೆಚ್ಚೆಂದು ನಾನು ಹಿಂದೆಯೂ ಅಂದುಕೊಂಡಿಲ್ಲ, ಈಗಲೂ ಅಂದುಕೊಂಡಿಲ್ಲ ಮುಂದೆಯೂ ಅಂದುಕೊಳ್ಳುವುದಿಲ್ಲ.
ಇನ್ನು ನಂಜನಗೂಡು ವಿಷಯಕ್ಕೆ ಬರುವುದಾದರೆ, ಅಲ್ಲಿ ಹಿಂದೆ ಉಪ ಚುನಾವಣೆ ಸಂದರ್ಭ ಏರ್ಪಟ್ಟಾಗ ನಮ್ಮ ಸುನಿಲ್ ಬೋಸ್ ಗೆ ಪಕ್ಷ ಸಂಘಟನೆ ಮಾಡಿ ಎಂದು ಆದೇಶ ಬಂದಿತ್ತು, ಅದರಂತೆಯೇ ಅವರು ಪಕ್ಷ ಸಂಘಟನೆಯಲ್ಲಿದ್ದಾಗ ಆತನಿಗೇ ಟಿಕೆಟ್ ನೀಡಿ ಎಂಬ ಕೂಗೂ ಸಹ ಇತ್ತು. ಆದರೆ ನಂತರ ಕಾಂಗ್ರೆಸ್ ಹೈಕಮಾಂಡ್ ನವರು ನಮ್ಮ ಕಳಲೆ ಕೇಶವಮೂರ್ತಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದಾಗ ನಾವು ಯಾವುದೇ ಬೇಸರ ಮಾಡಿಕೊಳ್ಳದೇ ಪಕ್ಷ ಸಂಘಟನೆಯಲ್ಲಿ ತೊಡಗಿ ಗೆಲುವಿಗಾಗಿ ಶ್ರಮಿಸಿದೆವು. ಇನ್ನು ಆ ಸಂದರ್ಭದ ಓಡಾಟದಲ್ಲಿ ನನ್ನ ಕಾಲಿನ ಹಿಮ್ಮಡಿಗೆ ಬಲವಾಗಿ ಏಟು ಬಿದ್ದು ನಾನು ಬದುಕಿದ್ದೇ ಹೆಚ್ಚು ಎನ್ನುವಂತಹ ಸ್ಥಿತಿಗೆ ತಲುಪಿದ್ದೆ. ಈಗಲೂ ಅದರ ಪರಿಣಾಮವನ್ನು ನಾನು ಅನುಭವಿಸುತ್ತಿದ್ದೇನೆ
ಇದಾದ ಬಳಿಕ ಅಲ್ಲಿ ಕಳಲೆ ಕೇಶವಮೂರ್ತಿ ಅವರನ್ನು ನಮ್ಮ ಸಂಘಟನೆಯ ಬಲದಿಂದ ಗೆಲ್ಲಿಸಿಕೊಂಡೆವು. ಈ ಸಂಗತಿಯು ಕಳಲೆ ಕೇಶವಮೂರ್ತಿ ಅವರಿಗೂ ಸಹ ಚೆನ್ನಾಗಿ ಗೊತ್ತು.
ಈ ಉಪ ಚುನಾವಣಾ ವರ್ಷದಲ್ಲಿ ನಂಜನಗೂಡು ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು ಏಳು ನೂರು ಕೋಟಿಗಳನ್ನು ನಮ್ಮ ಸರ್ಕಾರದ ವತಿಯಿಂದ ನೀಡಲಾಗಿ ಇಡೀ ಕ್ಷೇತ್ರವೇ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕಾಣುವಂತಾಯಿತು. ಈ ವೇಳೆ ಜಾತಿ ಧರ್ಮ ವ್ಯಕ್ತಿಯ ಬೇಧ ನೋಡದೇ ಇಡೀ ಕ್ಷೇತ್ರವೇ ಹೊಸ ರೂಪ ಪಡೆದುಕೊಂಡಂತೆ ಅಭಿವೃದ್ಧಿ ಕಂಡಿತು.
ಇದಾದ ಬಳಿಕ ಕ್ರಮೇಣ ” ಸರ್ ನೀವು ಮುಂದಿನ ಬಾರಿ ನಮ್ಮ ಕ್ಷೇತ್ರಕ್ಕೆ ಬನ್ನಿ” ಎಂದು ಅಲ್ಲಿನ ಹಲವು ಸಮುದಾಯಗಳ ಮುಖಂಡರು, ನನ್ನನ್ನು ಆಗಾಗ್ಗೆ ಬಂದು ವಿನಂತಿಸಿದರು. ಅಲ್ಲಿಯವರೆಗೆ ನನಗೆ ಆ ಯೋಚನೆಯೇ ಇರಲಿಲ್ಲ.
ನಂತರದ ಬೆಳವಣಿಗೆಯಲ್ಲಿ ನಂಜನಗೂಡು ನಮ್ಮೂರೇ ಆಗಿದ್ದು, ಜನರೂ ಬಯಸಿದ್ದರಿಂದ ಅಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ನಾನು ಮಾಡಿದ್ದೆ, ಅದೂ ಬಹಳ ತುಂಬಾ ಹಿಂದೆಯೇ.
ಆದರೆ ನಮ್ಮ ಸ್ನೇಹಿತರಾದ ಧೃವ ನಾರಾಯಣ್ ಅವರ ನಿಧನದ ಸಂದರ್ಭದಲ್ಲಿ ಇದು ಅನಾರೋಗ್ಯಕರ ಸ್ಪರ್ಧೆಯ ರೂಪದ ಮೂಲಕ ದ್ವೇಷದ ಮಾತುಗಳಿಗೂ ಸಹ ತಿರುಗಿದೆ. ಇಂತಹ ಮಾತುಗಳಲ್ಲಿ ಕೆಲವರ ಸಾಂದರ್ಭಿಕ ರಾಜಕೀಯದ ದುರ್ಲಾಭ ಪಡೆಯುವ ಹುನ್ನಾರವೂ ಸೇರಿದ್ದು ನನ್ನಲ್ಲಿ ಅನಿರೀಕ್ಷಿತವಾದ ನೋವನ್ನು ಉಂಟು ಮಾಡಿದೆ.
ನಮಗೂ ಒಂದು ಮನಸ್ಸು ಎಂಬುದು ಇರುತ್ತದೆ ಅಲ್ಲವೇ?
ಅದನ್ನು ಇವರೆಲ್ಲಾ ಗಮನಿಸಬೇಕಿತ್ತು.
ಅದೇನೇ ಇರಲಿ, ಈ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಈ ಹೊಲಸು ರಾಜಕೀಯಕ್ಕೂ ಮೀರಿದ ನೋವಿನಲ್ಲಿರುವ ನನ್ನ ಮಗನಂತಹ ದರ್ಶನ್ ಜೊತೆಗೆ ಈ ವೇಳೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ.
ಏಕೆಂದರೆ ಮನುಷ್ಯನ ಕ್ಲಿಷ್ಟ ಸಂದರ್ಭದಲ್ಲಿ ಧೈರ್ಯ ಮತ್ತು ಸಾಂತ್ವನಕ್ಕೆ ಮಿಗಿಲಾದ ಸಂಗತಿ ಇನ್ನೊಂದಿಲ್ಲ.
ಎಲ್ಲರಿಗೂ ಮತ್ತೊಮ್ಮೆ ನನ್ನ ನಮನಗಳು.!
ADVERTISEMENT
ADVERTISEMENT