Free Bus: ದೇವಸ್ಥಾನಗಳಲ್ಲಿ ಇ-ಹುಂಡಿ ಕಾಣಿಕೆಯಲ್ಲಿ ಭಾರೀ ಹೆಚ್ಚಳ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್​ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಕರ್ನಾಟಕದ ದೇವಸ್ಥಾನಗಳಲ್ಲಿ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ.

ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಮಹಿಳೆಯ ಭಕ್ತರ ಸಂಖ್ಯೆ ಹೆಚ್ಚಳದಿಂದ ದೇವಸ್ಥಾನಗಳಲ್ಲಿ ಹುಂಡಿ ಕಾಣಿಕೆ ಏರಿಕೆ ಆಗಿದೆ.

ಕರ್ನಾಟಕ 58 ಮುಜರಾಯಿ ದೇವಸ್ಥಾನಗಳಲ್ಲೂ ಆದಾಯ ಹೆಚ್ಚಳ ಆಗಿದೆ ಎಂದು ಮುಜುರಾಯಿ ಇಲಾಖೆ ಮಾಹಿತಿ ನೀಡಿದೆ. ಶಕ್ತಿ ಯೋಜನೆ ಜಾರಿ ಬಳಿಕ ಈ ದೇವಸ್ಥಾನಗಳಿಗೆ 25 ಕೋಟಿ ರೂಪಾಯಿಯಷ್ಟು ಕಾಣಿಕೆ ಬಂದಿದೆ.

ಜೂನ್​ 11ರಿಂದ ಜುಲೈ 15ರವರೆಗೆ ಕಳೆದ ವರ್ಷ ಇದೇ ಅವಧಿಯಲ್ಲಿ 19 ಕೋಟಿ ರೂಪಾಯಿಯಷ್ಟಿದ್ದ ಕಾಣಿಕೆ ಮೊತ್ತ ಈಗ ಇದೇ ಅವಧಿಯಲ್ಲಿ 25 ಕೋಟಿಯಾಗಿದೆ.

ಇ-ಹುಂಡಿ (ಆನ್​ಲೈನ್​ ಮೂಲಕ ಕಾಣಿಕೆ) ಮೂಲಕ ಸಿಗುತ್ತಿರುವ ಕಾಣಿಕೆ ಕಳೆದ ವರ್ಷ ಇದೇ ಅವಧಿಯಲ್ಲಿ 6 ಕೋಟಿ ರೂಪಾಯಿಯಾಗಿದ್ದರೆ ಈ ಬಾರಿ 24.47 ಕೋಟಿ ರೂಪಾಯಿಗೆ ಏರಿಕೆ ಆಗಿದೆ.

ಸದ್ಯಕ್ಕೆ ಮುಜರಾಯಿ ಇಲಾಖೆ ಈಗ ಇ-ಹುಂಡಿ ಕಾಣಿಕೆಯ ಬಗ್ಗೆಯಷ್ಟೇ ಮಾಹಿತಿ ನೀಡಿದೆ, ನೇರವಾಗಿ ಹುಂಡಿಗೆ ನೋಟು-ನಾಣ್ಯಗಳ ರೂಪದಲ್ಲಿ ಹಾಕಿರುವ ಕಾಣಿಕೆಯನ್ನು ಇನ್ನೂ ಲೆಕ್ಕ ಹಾಕಿಲ್ಲ.

ಮೈಸೂರಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇ-ಹುಂಡಿ ಮೂಲಕ ಜೂನ್​ 11ರಿಂದ ಜುಲೂ 15ರವರೆಗೆ 3 ಕೋಟಿ 63 ಲಕ್ಷ ರೂಪಾಯಿ ಕಾಣಿಕೆ ಬಂದಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 48 ಲಕ್ಷ ರೂಪಾಯಿ ಕಾಣಿಕೆ ಬಂದಿತ್ತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 11 ಕೋಟಿ 13 ಲಕ್ಷ ರೂಪಾಯಿ ಕಾಣಿಕೆ ಬಂದಿದ್ದರೆ, ಈಗ ಇ-ಹುಂಡಿ ಕಾಣಿಕೆ ಮೂಲಕ 11 ಕೋಟಿ 16 ಲಕ್ಷ ರೂಪಾಯಿ ಕಾಣಿಕೆ ಬಂದಿದೆ.

ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಕಳೆದ ವರ್ಷ 1 ಕೋಟಿ 12 ಲಕ್ಷ ರೂಪಾಯಿ ಕಾಣಿಕೆ ಬಂದಿತ್ತು, ಈ ಬಾರಿ 1 ಕೋಟಿ 48 ಲಕ್ಷ ರೂಪಾಯಿ ಕಾಣಿಕೆ ಬಂದಿದೆ.

ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕಳೆದ ವರ್ಷ 1 ಕೋಟಿ 2 ಲಕ್ಷ ರೂಪಾಯಿ ಕಾಣಿಕೆ ಬಂದಿತ್ತು, ಈ ಬಾರಿ ಇ-ಹುಂಡಿ ಮೂಲಕ 1 ಕೋಟಿ 41 ಲಕ್ಷ ರೂಪಾಯಿ ಕಾಣಿಕೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಳೆದ ವರ್ಷ 43 ಲಕ್ಷ ರೂಪಾಯಿ ಕಾಣಿಕೆ ಬಂದಿತ್ತು, ಈ ಬಾರಿ 48 ಲಕ್ಷ ರೂಪಾಯಿ ಕಾಣಿಕೆ ಬಂದಿದೆ.

LEAVE A REPLY

Please enter your comment!
Please enter your name here