ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿದೆ. ಹಿತ್ತಲಲ್ಲೇ ಅನೇಕ ಔಷಧೀಯ ಗುಣಗಳಿರುವ ಸಸ್ಯಗಳಿದ್ದರೂ ಅದನ್ನು ಗುರುತಿಸುವಲ್ಲಿ ವಿಫಲವಾಗಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅದರ ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಔಷಧೀಯ ಸಸ್ಯಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಅದಕ್ಕೊಂದು ವನ ನಿರ್ಮಾಣ ಮಾಡುವತ್ತ ತನ್ನ ಚಿತ್ತ ಹರಿಸಿ ವಿಭಿನ್ನ ಪ್ರಯೋಗಕ್ಕೆ ಇಂದು ಪರಿಸರ ದಿನಾಚರಣೆಯ ಅಂಗವಾಗಿ ನಾಂದಿ ಹಾಡಿತು.
ಶಾಲಾ ವಿದ್ಯಾರ್ಥಿಗಳು ತಾವು ಗುರುತಿಸಿ ತಂದ ಔಷಧೀಯ ಸಸ್ಯಗಳನ್ನು ಶಾಲೆಯಲ್ಲಿ ನೆಟ್ಟು ಅದರ ಉಪಯೋಗ ತಾವೇ ಸ್ವತಃ ವಿವರಿಸಿ ಹೇಳಿದರು.ಶಾಲೆಯ ಪರಿಸರ ಸಂಘದ ಜವಾಬ್ದಾರಿ ಹೊತ್ತಿರುವ ಶ್ರೀಮತಿ ಶಿಭಾ ಔಷಧೀಯ ಸಸ್ಯಗಳನ್ನು ಉಳಿಸುವ ಅಗತ್ಯತೆ ಬಗ್ಗೆ ವಿವರಿಸಿದರೆ, ಶ್ರೀಮತಿ ಸೌಮ್ಯ ಅವುಗಳನ್ನು ಶಾಲೆಯಲ್ಲಿ ನಿರ್ವಹಿಸುವ ಬಗ್ಗೆ ಗೊಬ್ಬರ ನೀರು ಇತ್ಯಾದಿ ಉಣಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ಹಂಚಿದರು.
ಶಾಲಾ ಪರಿಸರ ಸಂಘದ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿ ಪರಿಸರ ಉಳಿಸುವ ಪಣತೊಟ್ಟರು.ಶಾಲಾ ಮುಖ್ಯೊಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ ಅವರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ಉತ್ತಮವಾಗಿ ನಡೆಯಿತು.