ಕೋವಿಡ್ ಲಸಿಕೆ ಪಡೆಯುವ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಇಲಾಖೆಗೆ ಸಾರ್ವಜನಿಕರು ಸಲ್ಲಿಕೆ ಮಾಡಿದ್ದ ದತ್ತಾಂಶಗಳೆಲ್ಲವೂ ಸಾಮಾಜಿಕ ಜಾಲತಾಣ ಟೆಲಿಗ್ರಾಂನಲ್ಲಿ (Telegram App) ಸೋರಿಕೆಯಾಗಿವೆ.
ಈ ಬಗ್ಗೆ ಮೊದಲು ತನಿಖಾ ವರದಿ ಪ್ರಕಟಿಸಿದ್ದು ಮಲಯಾಳಂ THE FOURTHNEWS. ಆ ಬಳಿಕ ಈ ಸುದ್ದಿಯನ್ನು ದಿ ನ್ಯೂಸ್ ಮ್ಯೂನಿಟ್ ಕೂಡಾ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಲಸಿಕೆ ಪಡೆಯುವ ವೇಳೆ ಕಡ್ಡಾಯವಾಗಿ ಸಲ್ಲಿಕೆ ಮಾಡಲಾಗಿದ್ದ ಲಸಿಕೆ ಪಡೆದವರ ದೂರವಾಣಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪಾಸ್ಪೋರ್ಟ್ ಮಾಹಿತಿ, ಪ್ಯಾನ್ ಮಾಹಿತಿ ಅಥವಾ ಸಲ್ಲಿಕೆ ಮಾಡಲಾಗಿದ್ದ ಗುರುತಿನ ಚೀಟಿ ಮಾಹಿತಿ ಮತ್ತು ಜನ್ಮ ದಿನಾಂಕ ಒಳಗೊಂಡಂತೆ ಹಲವು ಮಾಹಿತಿಗಳು ಟೆಲಿಗ್ರಾಂನಲ್ಲಿ ಸೋರಿಕೆ ಆಗಿವೆ.
ಟೆಲಿಗ್ರಾಂ ಅ್ಯಪ್ನಲ್ಲಿ ವ್ಯಕ್ತಿಯ ಮೊಬೈಲ್ ನಂಬರ್ನ್ನು ನಮೂದು ಮಾಡಿದರೆ ಆ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಯಾರೂ ಬೇಕಾದರೂ ಪಡೆದುಕೊಳ್ಳಬಹುದು.
ಯಾವ ದಿನ ಯಾರು ಎಲ್ಲಿ ಲಸಿಕೆ ಪಡೆದರೆ ಮಾಹಿತಿಯನ್ನೂ ಟೆಲಿಗ್ರಾಂನಲ್ಲಿ ಯಾರೂ ಬೇಕಾದರೂ ಪಡೆದುಕೊಳ್ಳಬಹುದು.
ಕೋವಿಡ್ ಲಸಿಕೆ ಪಡೆಯುವ ವೇಳೆ ಕೇಂದ್ರ ಸರ್ಕಾರವೇ ಅಭಿವೃದ್ಧಿಪಡಿಸಿರುವ ಕೋವಿನ್ ವೆಬ್ಸೈಟ್ಗೆ ಲಸಿಕೆ ಪಡೆಯದವರ ಖಾಸಗಿ ಮಾಹಿತಿಗಳೆಲ್ಲವನ್ನೂ ದಾಖಲು ಮಾಡಲಾಗಿತ್ತು.
ಅಪರಿಚಿತರ ಕೈಗೆ ಖಾಸಗಿ ಮಾಹಿತಿ:
ಟೆಲಿಗ್ರಾಂ Appನಲ್ಲಿ ಕೋವಿಡ್ ಲಸಿಕೆ ಪಡೆದವರ ಮಾಹಿತಿ ಭಾರತೀಯರ ಮಾಹಿತಿ ಸೋರಿಕೆ ಆಗಿರುವುದರಿಂದ ಯಾರೂ ಬೇಕಾದ ಯಾರ ಖಾಸಗಿ ಮಾಹಿತಿ, ಖಾಸಗಿ ದಾಖಲೆಗಳನ್ನು ತಿಳಿದುಕೊಳ್ಳಬಹುದು. ಇದರಿಂದ ಆಧಾರ್, ದೂರವಾಣಿ ಸಂಖ್ಯೆ, ಪ್ಯಾನ್, ವೋಟರ್ ಐಡಿ ಸೇರಿದಂತೆ ದಾಖಲೆಗಳನ್ನು ಅಪರಿಚಿತರ ಕೈಗೆ ಕೊಡದೇ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕೆಂಬ ಉದ್ದೇಶಕ್ಕೆ ದೊಡ್ಡ ಹೊಡೆತ ನೀಡಿದೆ.
ಮುಖ್ಯಮಂತ್ರಿ, ಸಚಿವರ ಮಾಹಿತಿಯೂ ಸೋರಿಕೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಧಾರ್ ಕಾರ್ಡ್ ಮಾಹಿತಿ, ಅವರ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರ ಆಧಾರ್ ಕಾರ್ಡ್ ಮಾಹಿತಿಯೂ ಸೋರಿಕೆ ಆಗಿದೆ. ಈ ಮಾಹಿತಿಯನ್ನೇ ಲಸಿಕೆ ಪಡೆಯುವ ವೇಳೆ ಕೊಟ್ಟಿದ್ದರು.
ತೆಲಂಗಾಣ ಸಿಎಂ ಕೆ ಸಿ ಚಂದ್ರಶೇಖರ್ ರಾವ್ ಮಗ ಕೆಟಿಆರ್, ಡಿಎಂಕೆ ಸಂಸದೆ ಕನಿಮೊಳಿ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ಕೇಂದ್ರ ಆರೋಗ್ಯ ಖಾತೆ ಮಾಜಿ ಸಚಿವ ಹರ್ಷವರ್ಧನ್ ಅವರ ಮಾಹಿತಿಯೂ ಸೋರಿಕೆ ಆಗಿದೆ. ಇವರೆಲ್ಲರೂ ಲಸಿಕೆ ಪಡೆಯುವ ವೇಳೆ ಪಾಸ್ಪೋರ್ಟ್ ಮಾಹಿತಿಯನ್ನು ನೀಡಿದ್ದರು.
ದತ್ತಾಂಶ ಸೋರಿಕೆ ಬಗ್ಗೆ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಕೂಡಾ ಮಾತಾಡಿದ್ದಾರೆ. ಜೊತೆಗೆ ತಮ್ಮದೇ ಖಾಸಗಿ ಮಾಹಿತಿ ಸೋರಿಕೆ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಎಚ್ಚರಿಕೆ: ನಿರಾಕರಿಸಿದ್ದ ಮೋದಿ ಸರ್ಕಾರ
2021ರ ಜೂನ್ನಲ್ಲಿ ಕೋವಿನ್ ಪೋರ್ಟಲ್ಗೆ ನೀಡಲಾಗಿರುವ ವ್ಯಕ್ತಿಗಳ ಖಾಸಗಿ ಮಾಹಿತಿಗಳೆಲ್ಲವೂ ಸೋರಿಕೆ ಆಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಆಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆ ಆರೋಪವನ್ನು ನಿರಾಕರಿಸಿತ್ತು.
ಕಳೆದ ವರ್ಷದ ಜನವರಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ನಿರ್ವಹಣಾಧಿಕಾರಿ ಆರ್ ಎಸ್ ಶರ್ಮಾ ಅವರು
ಕೋವಿನ್ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿದ್ದು, ಜನರ ಮಾಹಿತಿಗಳೆಲ್ಲವೂ ಸುರಕ್ಷಿತ ಮತ್ತು ಸುಭದ್ರವಾಗಿದೆ ಹಾಗೂ ಕೋವಿನ್ ಯಾವತ್ತೂ ದತ್ತಾಂಶ ಸೋರಿಕೆ ಎದುರಿಸಿಲ್ಲ ಮತ್ತು ಕೋವಿನ್ನಿಂದ ದತ್ತಾಂಶ ಸೋರಿಕೆ ಆಗಿದೆ ಎಂಬ ಆರೋಪಕ್ಕೆ ಯಾವುದೇ ಬೆಲೆ ಇಲ್ಲ