ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಯುವಜನ ಶ್ರಮಿಕ ರೈತ ಕಾಂಗ್ರೆಸ್ (ವೈಎಸ್ಆರ್ಸಿ) ಪಕ್ಷದ ಅಜೀವ ಅಧ್ಯಕ್ಷರಾಗಿ ಶನಿವಾರ ಆಯ್ಕೆಯಾಗಿದ್ದಾರೆ.
ಪಕ್ಷದ ಬೈಲಾ ತಿದ್ದುಪಡಿ ಮಾಡಿ ಜಗನ್ ಅವರನ್ನು ಜೀವಿತಾವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
2011 ರಲ್ಲಿ ಕಾಂಗ್ರೆಸ್ ಪಕ್ಷ ತ್ಯಜಿಸಿದ್ದ ಜಗನ್ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ದರು. ಆಗಿನಿಂದಲೂ ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದು, ತಾಯಿ ವಿಜಯಮ್ಮ ಗೌರವಾಧ್ಯಕ್ಷರಾಗಿದ್ದರು.
ನಿನ್ನೆ ಶುಕ್ರವಾರವಷ್ಟೇ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ವಿಜಯಮ್ಮ, ನೆರೆಯ ರಾಜ್ಯದಲ್ಲಿ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಮುನ್ನಡೆಸುತ್ತಿರುವ ಪುತ್ರಿ ಶರ್ಮಿಳಾ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು.
2017 ರಲ್ಲಿ ಪಕ್ಷದ ಸಭೆಯಲ್ಲಿ ಜಗನ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. ಜಗನ್ ಅವರನ್ನು ಜೀವಿತಾವಧಿಗೆ ಪಕ್ಷದ ಮುಖ್ಯಸ್ಥರಾಗಿರಲು ಕೇಂದ್ರ ಚುನಾವಣಾ ಆಯೋಗದ ಒಪ್ಪಿಗೆ ಪಡೆಯಬೇಕಾಗಿದೆ.