5 ಕೆ ಜಿ ಅಕ್ಕಿ ಬದಲು ಜುಲೈ 1ರಿಂದ ಹಣ ಕೊಡ್ತೀವಿ – ಸಿಎಂ ಸಿದ್ದರಾಮಯ್ಯ ಸರ್ಕಾರ ಘೋಷಣೆ

ಮಹತ್ವದ ನಿರ್ಧಾರವೊಂದರಲ್ಲಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಬದಲು ಹಣ ನೀಡಲು ನಿರ್ಧಾರ ಮಾಡಿದೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈಗಾಗಲೇ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಬಿಪಿಎಲ್​ ಕಾರ್ಡ್​ ಹೊಂದಿರುವ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಅಂದರೆ ಒಟ್ಟು 10 ಕೆಜಿ ಅಕ್ಕಿ ನೀಡುವ ನಿರ್ಧಾರವನ್ನು ಕಾಂಗ್ರೆಸ್​ ಘೋಷಿಸಿತ್ತು. 

ಆದರೆ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿಯಾಗಿ ಅಕ್ಕಿ ನೀಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈಗ ಸಿಎಂ ಸಿದ್ದರಾಮಯ್ಯನವರು ತಮ್ಮ ಘೋಷಣೆಯ ಜಾರಿಗೆ ಪ್ರತಿತಂತ್ರ ರೂಪಿಸಿದ್ದಾರೆ.

ಪ್ರತಿ ಕೆಜಿಗೆ 34 ರೂಪಾಯಿಯಂತೆ ಐದು ಕೆಜಿ ಹಣವನ್ನು ಸರ್ಕಾರ ಬಿಪಿಎಲ್​ ಪಡಿತರ ಖಾತೆದಾರರ ಖಾತೆಗೆ ಜಮೆ ಮಾಡಲಿದೆ.

ಒಂದು ವೇಳೆ ಒಂದು ಮನೆಯಲ್ಲಿ ಐವರು ಸದಸ್ಯರಿದ್ದರೆ ಆಗ ಅವರ ಖಾತೆಗೆ 25 ಕೆ ಜಿ ಅಕ್ಕಿಯ ಹಣವನ್ನು ಕೆಜಿಗೆ 34 ರೂಪಾಯಿಯಂತೆ ಜಮೆ ಮಾಡಲಾಗುತ್ತದೆ. ಅಂದರೆ ಬಿಪಿಎಲ್​ 1 ಕುಟುಂಬದಲ್ಲಿ 5 ಮಂದಿ ಇದ್ದರೆ ಆ ಕುಟುಂಬಕ್ಕೆ ಪ್ರತಿ ತಿಂಗಳು 850 ರೂಪಾಯಿ ಲಭಿಸುತ್ತದೆ. 

ಜುಲೈ 1ರಿಂದಲೇ ಯೋಜನೆ ಜಾರಿ ಮಾಡ್ತೀವಿ ಎಂದು ಆಹಾರ ಸಚಿವ ಕೆ ಎಚ್​ ಮುನಿಯಪ್ಪ ಅವರು ಘೋಷಿಸಿದ್ದಾರೆ.

ಒಂದು ವೇಳೆ ಆಗಸ್ಟ್​ ವೇಳೆಗೆ ಅಕ್ಕಿ ಲಭ್ಯವಾದ ಕೂಡಲೇ ಹಣದ ಬದಲು ಅಕ್ಕಿ ಪೂರೈಸುವುದಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ.