ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಮಾರ್ಚ್ನಲ್ಲಿ ಏಳನೇ ವೇತನ ಆಯೋಗದ ಮಧ್ಯಂತರ ವರದಿ ನೀಡುವುದಾಗಿ ಸಿಎಂ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಇದರಿಂದ ಆಕ್ರೋಶಿತ ರಾಜ್ಯ ಸರ್ಕಾರಿ ನೌಕರರು ಫೆಬ್ರವರಿ 23ರಂದು ಬೆಂಗಳೂರಲ್ಲಿ ಸಭೆ ಸೇರಿ ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿದ್ದರು.
ಫೆಬ್ರವರಿ 17ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ತಮ್ಮ ಸರ್ಕಾರದ ಕೊನೆಯ ಆಯವ್ಯಯದಲ್ಲಿ ಏಳನೇ ವೇತನ ಆಯೋಗದ ಬಗ್ಗೆಯಾಗಲೀ, ಹಳೆ ಪಿಂಚಣಿ ಯೋಜನೆ ಮರು ಜಾರಿಯ ಬಗ್ಗೆಯಾಗಲೀ ಉಲ್ಲೇಖ ಮಾಡಿರಲಿಲ್ಲ.
ಸರ್ಕಾರಿ ನೌಕರರ ಸಂಖ್ಯಾ ಬಲ:
ರಾಜ್ಯ ಸರ್ಕಾರಿ ನೌಕರರ ಸಂಘದ ಮಾಹಿತಿಯ ಪ್ರಕಾರ:
6 ಲಕ್ಷ ಮಂದಿ ಸರ್ಕಾರಿ ನೌಕರರು, ನಿಗಮ, ಮಂಡಳಿ, ಪ್ರಾಧಿಕಾರಗಳ 3 ಲಕ್ಷ ಮಂದಿ ನೌಕರರು ಒಟ್ಟು ಸೇರಿ 9 ಲಕ್ಷ ಮಂದಿ ನೌಕರರಿದ್ದಾರೆ. ಜೊತೆಗೆ 5 ಲಕ್ಷ ಮಂದಿ ನಿವೃತ್ತ ಸರ್ಕಾರಿ ನೌಕರರಿದ್ದಾರೆ.
ಸೇವೆಯಲ್ಲಿರುವ ಮತ್ತು ನಿವೃತ್ತ ನೌಕರರನ್ನು ಸೇರಿಸಿ ಒಟ್ಟು 15 ಲಕ್ಷ ಮಂದಿ.
ಸರ್ಕಾರಿ ನೌಕರರಿಂದ ದೇಣಿಗೆ:
ರಾಜ್ಯ ಸರ್ಕಾರಿ ನೌಕರರು ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ತಮ್ಮ ಒಂದು ದಿನದ ವೇತನವನ್ನು ಕೋವಿಡ್ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದರು. ಅದರ ಮೊತ್ತ 200 ಕೋಟಿ ರೂಪಾಯಿ.
ಜೊತೆಗೆ ಕೋವಿಡ್ ಸಂಕಷ್ಟದಲ್ಲಿ 18 ತಿಂಗಳ ತುಟ್ಟಿಭತ್ಯೆ ವ್ಯತ್ಯಾಸದ ಮೊತ್ತವನ್ನು ಕೋವಿಡ್ ನಿರ್ವಹಣೆಗೆ ಬಿಟ್ಟುಕೊಟ್ಟಿದ್ದಾರೆ. ಅದರ ಮೊತ್ತ 4 ಸಾವಿರ ಕೋಟಿ ರೂಪಾಯಿ.
ಬಿಜೆಪಿ ಸರ್ಕಾರ ಆರಂಭಿಸಿದ್ದ ದನಗಳನ್ನು ದತ್ತು ಪಡೆಯುವ ಯೋಜನೆ ಪುಣ್ಯ ಕೋಟಿಗೆ 40 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ:
ಕರ್ನಾಟಕದಲ್ಲಿ 6ನೇ ವೇತನ ಆಯೋಗ ರಚನೆ ಆಗಿದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. ಜೂನ್ 6, 2017ರಲ್ಲಿ. ಆಯೋಗ ಜನವರಿ 31, 2018ರಲ್ಲಿ ವರದಿ ನೀಡಿತ್ತಾದರೂ 2017ರ ಜುಲೈ 1ರಿಂದಲೇ ಆರನೇ ವೇತನ ಆಯೋಗದ ಶಿಫಾರಸ್ಸು ಪೂರ್ವಾನ್ವಯವಾಗುವಂತೆ ಆಗಿನ ಕಾಂಗ್ರೆಸ್ ಸರ್ಕಾರ 2018ರ ಜನವರಿ 3ರಂದು ಆದೇಶಿಸಿತ್ತು.
ಏಳನೇ ವೇತನ ಆಯೋಗ:
ಏಳನೇ ವೇತನ ಆಯೋಗವನ್ನು ಬಿಜೆಪಿ ಸರ್ಕಾರ ರಚಿಸಿದ್ದು ಕಳೆದ ವರ್ಷದ ನವೆಂಬರ್ 11. ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಕಾರ ಕಳೆದ ವರ್ಷದ ಜುಲೈ 1ರಿಂದಲೇ ಅಂದರೆ 8 ವರ್ಷ ವಿಳಂಬವಾಗಿದೆ.
ADVERTISEMENT
ADVERTISEMENT