ಭಾರತ ಮಾರಣಾಂತಿಕ ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿಹೋಗಿದ್ದು , ಆಕ್ಸಿಜನ್ , ಬೆಡ್ ಗಳ ಕೊರತೆ ಎದುರಿಸುತ್ತಿರುವ ನಡುವೆಯೇ ಮತ್ತೊಂದು ಕಳವಳಕಾರಿ ಸುದ್ದಿಯೊಂದು ಹೊರಬಿದ್ದಿದೆ . ಜುಲೈವರೆಗೆ ಭಾರತದಲ್ಲಿ ಲಸಿಕೆ ಕೊರತೆಯನ್ನು ಎದುರಿಸಬೇಕಾಗಲಿದೆ ಎಂದು ಸೀರಂ ಇನ್ಸ್ಟಿಟ್ಯೂಟ್ ( ಎಸ್ ಐಐ ) ಮುಖ್ಯಸ್ಥ ಆದರ್ ಪೂನವಾಲ ತಿಳಿಸಿದ್ದಾರೆ.
ದೇಶದಲ್ಲಿ ಕಳೆದ ಕೆಲವು ದಿನಗಳಿಂದ 3 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದೆ. ಭಾರತದ ಸದ್ಯದ ಕೋವಿಡ್ ಪರಿಸ್ಥಿತಿ ಜಗತ್ತಿನ ಇತರ ದೇಶಗಳಿಗಿಂತ ತುಂಬಾ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ. ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ನಡುವೆ ಕೋವಿಡ್ ಲಸಿಕೆ ಸರಬರಾಜು ಕುರಿತು ಪ್ರಶ್ನೆಗಳು ಉದ್ಭವವಾಗುತ್ತಿರುವ ಸಂದರ್ಭದಲ್ಲಿಯೇ ಸೀರಂ ಮುಖ್ಯಸ್ಥ ಆದ ಪೂನವಾಲ, ಕೋವಿಡ್ 19 ಲಸಿಕೆಯ ಉತ್ಪಾದನೆಯನ್ನು ಜುಲೈ ತಿಂಗಳಿನಿಂದ ಹೆಚ್ಚಳ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಮೇ 1 ರಂದು ದೇಶಾದ್ಯಂತ ಮೂರನೇ ಹಂತದ ಲಸಿಕೆ ಅಭಿಯಾನ ಆರಂಭವಾದ ಎರಡು ದಿನಗಳ ನಂತರ ಪೂನವಾಲ ಈ ಹೇಳಿಕೆಯನ್ನು ನೀಡಿದ್ದಾರೆ. ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೂ ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆಯಿಂದ 3 ನೇ ಹಂತದ ಲಸಿಕೆ ಅಭಿಯಾನ ಆರಂಭಿಸಿಲ್ಲ.